ಬೆಂಗಳೂರು: ಸಿಎಂ ಗ್ಯಾರಂಟಿ ಯೋಜನೆ ಜಾರಿ ಘೋಷಣೆ ಬೆನ್ನಲ್ಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ಮಾಡಿದ್ದು, ಸಿದ್ದರಾಮಯ್ಯ ಚುನಾವಣೆ ಪೂರ್ವದಲ್ಲಿ ಹೇಳಿರುವ ಮಾತುಗಳು, ಚುನಾವಣೆ ಬಳಿಕ ಹೇಳಿದ ಮಾತಿಗೂ ವ್ಯತ್ಯಾಸವಿದೆ.
ಪ್ರತಿ ಮನೆಗೆ ಉಚಿತ 200 ಯೂನಿಟ್ ವಿದ್ಯುತ್ ಎಂದು ಹೇಳಿದ್ದರು. 200 ಯೂನಿಟ್ ಒಳಗೆ ಬಳಸಿದ್ರೆ ಉಚಿತ ವಿದ್ಯುತ್ ನೀಡಬೇಕು. ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ಎಂದು ಸಿಎಂ ಹೇಳಿದ್ದಾರೆ ಎಂದರು.
ಗ್ಯಾರಂಟಿಯಲ್ಲಿ ಮೋಸ ಮಾಡ್ತಿದ್ದಾರೆ ಎಂಬುದನ್ನು ಮೊದಲೇ ಹೇಳಿದ್ದೆ. ಕೇಂದ್ರ ಸರ್ಕಾರ ಉಚಿತವಾಗಿ ತಲಾ 5 ಕೆಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರ ಉಳಿದ 5 ಕೆಜಿ ಅಕ್ಕಿಯನ್ನು ಮಾತ್ರ ಕೊಡುತ್ತಿದೆ. 10 ಕೆಜಿಯಲ್ಲಿ ರಾಗಿ, ಜೋಳ ಸೇರಿದೆಯಾ, ಹೆಚ್ಚುವರಿ ಕೊಡ್ತಿದ್ದಾರಾ? ಅನ್ನಭಾಗ್ಯ ಯೋಜನೆ ಬಗ್ಗೆಯೂ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿಲ್ಲ. 10 ಕೆಜಿಯಲ್ಲಿ ಅಕ್ಕಿ ಜತೆ ರಾಗಿ, ಜೋಳ ಇದೆಯೋ ಇಲ್ಲವೋ ಸ್ಪಷ್ಟವಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಗೃಹಲಕ್ಷ್ಮೀ ಯೋಜನೆಯಲ್ಲೂ ಭಾರಿ ಮೋಸ ಮಾಡುತ್ತಿದ್ದಾರೆ. ಆನ್ಲೈನ್ ಅರ್ಜಿಯಲ್ಲಿ ಅರ್ಧ ಫಲಾನುಭವಿಗಳನ್ನು ತೆಗೆಯುತ್ತಾರೆ. ಈ ಯೋಜನೆಯನ್ನು ಬಹಳ ಸರಳವಾಗಿ ಜಾರಿ ಮಾಡಬಹುದಿತ್ತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾಹಿತಿ ಪಡೆದು ಹಣ ನೀಡಬಹುದಿತ್ತು. ಆಗಸ್ಟ್ನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಹಾಕುತ್ತೇವೆ ಅಂತಿದ್ದಾರೆ. ಜೂನ್, ಜುಲೈ ತಿಂಗಳ ಹಣ ಸೇರಿಸಿಕೊಡುವ ಬಗ್ಗೆ ಮಾಹಿತಿಯಿಲ್ಲ. ಒಂದುವೇಳೆ ಕೊಡದಿದ್ರೆ ಜೂನ್, ಜುಲೈ ತಿಂಗಳ ಹಣ ಏನಾಯ್ತು? ಮುಂದೆ ಇನ್ನೇನು ಷರತ್ತು ಹಾಕುತ್ತಾರೋ ನೋಡೋಣ ಎಂದು ಬೊಮ್ಮಾಯಿ ಹೇಳಿದರು.