ಲಕ್ನೋ: ಉತ್ತರ ಪ್ರದೇಶದ (UP) 16 ಲೋಕಸಭಾ ಕ್ಷೇತ್ರಗಳಿಗೆ (Lok Sabha Seats) ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅಧಿಕೃತವಾಗಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದಾರೆ. I.N.D.I.A ಒಕ್ಕೂಟದ ಮಿತ್ರಪಕ್ಷವಾದ ಕಾಂಗ್ರೆಸ್ಗೆ 11 ಸ್ಥಾನಗಳನ್ನ ಕಾಯ್ದಿರಿಸಿದೆ ಎಂದು ಹೇಳಿದ ಒಂದು ದಿನದ ನಂತರ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ.
ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ (Dimple Yadav) ಅವರು ಮೈನ್ಪುರಿಯಿಂದ ಸ್ಪರ್ಧಿಸಲಿದ್ದಾರೆ. ಇನ್ನೂ ಶಫೀಕರ್ ರೆಹಮಾನ್ ಬಾರ್ಕ್ ಸಂಭಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ರೆ, ರವಿದಾಸ್ ಮೆಹ್ರೋತ್ರಾ ಲಕ್ನೋದಿಂದ ಕಣಕ್ಕಿಳಿಯಲಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 11 ಒಬಿಸಿಗಳು, ಓರ್ವ ಮುಸ್ಲಿಂ, ಓರ್ವ ದಲಿತ, ಓರ್ವ ಠಾಕೂರ್, ಓರ್ವ ಟಂಡನ್ ಮತ್ತು ಓರ್ವ ಖತ್ರಿ ಅಭ್ಯರ್ಥಿಗಳಿದ್ದಾರೆ.
11 OBC ಅಭ್ಯರ್ಥಿಗಳಲ್ಲಿ ನಾಲ್ವರು ಕುರ್ಮಿ, ಮೂರು ಯಾದವ್, ಇಬ್ಬರು ಶಾಕ್ಯ, ಒಬ್ಬ ನಿಶಾದ್ ಮತ್ತು ಒಬ್ಬ ಪಾಲ್ ಸೇರಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್ಡಿಎ ಸೇರ್ಪಡೆಯಾದ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ ಸಮಾಜವಾಧಿ ಪಕ್ಷ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳದಲ್ಲೂ ಮಮತಾ ಬ್ಯಾನರ್ಜಿ ಮುಂಬರುವ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ.