ಬೆಂಗಳೂರು: 110 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೋ ಆದಿತ್ಯ ಎಲ್1 (Aditya-L1) ನೌಕೆಯು 15 ಲಕ್ಷ ಕಿಮೀ ಕ್ರಮಿಸಿ ಅಂತಿಮ ಕಕ್ಷೆ ತಲುಪಿದೆ. ಈ ಮೂಲಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್ಗಳೊಂದಿಗೆ ಉಡಾವಣೆಗೊಂಡಿತ್ತು. ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ (Space) ನೌಕೆಯನ್ನು ಕಳುಹಿಸಿತ್ತು.
ಬೆಳಗ್ಗಿನಿಂದಲೇ ಹಾಲೋ ಆರ್ಬಿಟ್ ಅಳವಡಿಕೆಯ ಕಾರ್ಯವನ್ನು ಮುಂದುವರಿಸಿ ಲಗ್ರೇಂಜ್ ಪಾಯಿಂಟ್-1 ರಲ್ಲಿ ಇರಿಸಲು ಪ್ರಾರಂಭಿಸಿತ್ತು. ಅಂದುಕೊಂಡಂತೆ ಆದಿತ್ಯ ಎಲ್-1 ನೌಕೆಯು ನಿಗದಿತ ಕಕ್ಷೆ ತಲುಪಿದ್ದು, ದೊಡ್ಡ ಯಶಸ್ಸು ತಂದುಕೊಟ್ಟಿದೆ. 2023ರ ಚಂದ್ರಯಾನ-3 ಯಶಸ್ವಿ ಬಳಿಕ ಇಸ್ರೋ (ISRO) ಸ್ಥಾಪಿಸಿದ ಮಹತ್ವದ ಮೈಲುಗಲ್ಲು ಇದಾಗಿದೆ.
ಇನ್ಮುಂದೆ ಆದಿತ್ಯ L1 ನೌಕೆಯು ನಿಗದಿತ ಕಕ್ಷೆಯಲ್ಲಿ ನಿಂತು ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಅಧ್ಯಯನ ನಡೆಸಲಿದೆ.