ಹಾಸನ: ಸತ್ಯಕ್ಕೆ ಜಯ ಸಿಕ್ಕಿದೆ. ನನಗೆ ನ್ಯಾಯ ಸಿಗಲು ನೀವೆಲ್ಲರೂ ಸಹಕಾರ ಕೊಟ್ಟಿದ್ದೀರಿ. ನನಗೆ ತುಂಬಾ ಖುಷಿಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ (Prathap Simha) ಅವರ ಸಹೋದರ ವಿಕ್ರಂ ಸಿಂಹ (Vikram Simha) ಹೇಳಿಕೆ ನೀಡಿದ್ದಾರೆ.
ಮರಗಳ್ಳತನ ಪ್ರಕರಣದಲ್ಲಿ ಜಾಮೀನು (Bail) ಮಂಜೂರಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬರೀ ಬೆಳೆ ಬೆಳೆಯಲು ಹೋದವನು. ಆ ಬೆಳೆ ಬೆಳೆಯಲು ಹೋದವನಿಗೆ ಈ ತರಹದ ಆರೋಪಗಳನ್ನು ಎದುರಿಸಬೇಕಾಗಿ ಬಂತು. ಇದೆಲ್ಲಾ ಒಂದು ರೀತಿಯ ರಾಜಕೀಯ ಪಿತೂರಿ. ಸತ್ಯಕ್ಕೆ ಜಯ ನ್ಯಾಯಾಲಯದಲ್ಲಿ ಸಿಕ್ಕಿದೆ ಎಂದರು.
ಇದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ನಾನು ನ್ಯಾಯದ ದಾರಿಯಲ್ಲಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಜಾಮೀನು ಸಿಕ್ಕಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ನ್ಯಾಯ ಸಿಗುತ್ತೆಯೆಂಬ ಭರವಸೆಯಿದೆ ಎಂದು ಹೇಳಿದರು. ಭಾನುವಾರ ರಜಾ ಹಿನ್ನೆಲೆ ವಿಕ್ರಂ ಸಿಂಹ ಅವರನ್ನು ಹಾಸನದ ಬೇಲೂರಿನಲ್ಲಿರುವ ನ್ಯಾಯಾಧೀಶರ ನಿವಾಸದ ಮುಂದೆ ಅರಣ್ಯ ಅಧಿಕಾರಿಗಳು ಹಾಜರುಪಡಿಸಿದ್ದರು. ಜೆಎಂಎಫ್ಸಿ ನ್ಯಾಯಾಧೀಶರಾದ ಪ್ರಕಾಶ್ ನಾಯ್ಕ ಎದುರು ವಿಕ್ರಂ ಸಿಂಹನನ್ನು ಹಾಜರು ಪಡಿಸಿದ್ದು, ವಿಚಾರಣೆ ಬಳಿಕ ಯಾವುದೇ ಷರತ್ತು ವಿಧಿಸದೇ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.