ಬೆಂಗಳೂರು;- ಪಕ್ಷ ಬಿಟ್ಟು ಹೋಗಿ ಅಂತಾ ನಾನು ಸೋಮಶೇಖರ್ಗೆ ಹೇಳಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಪಕ್ಷ ಬಿಟ್ಟು ಹೋಗಿ ಅಂತಾ ನಾನು ಸೋಮಶೇಖರ್ಗೆ ಹೇಳಿಲ್ಲ, ಪಕ್ಷದಲ್ಲಿ ನಿಷ್ಠೆ, ನಂಬಿಕೆ ಇದ್ದರೆ ನಮ್ಮ ಜೊತೆ ಇರಿ ಅಂತಾ ಅಷ್ಟೇ ಹೇಳಿದ್ದೇನೆ. ಅಧಿಕಾರ ಇದ್ದರೆ ಮಾತ್ರ ಬರುತ್ತೇನೆ, ಇಲ್ಲದಿದ್ದರೆ ಹೋಗುತ್ತೇನೆ ಅಂದರೆ ನಿಮ್ಮಿಷ್ಟ ಅನ್ನುತ್ತೇವೆ. ಅವರನ್ನು ಇಲ್ಲಿ ಇಟ್ಟುಕೊಳ್ಳಲು ನಾನ್ಯಾರು? ಅವರಿಗೆ ಅವರದ್ದೇ ಆದ ಸ್ವಾತಂತ್ರ್ಯ ಇದೆ. ಇದ್ದರೆ ಇರಬಹುದು, ಬಿಟ್ಟರೆ ಹೋಗಬಹುದು. ಹೋದ ಮೇಲೆ ಬೇಕಾದರೆ ಟೀಕೆ ಮಾಡಲಿ. ಇನ್ನೂ ಬಿಜೆಪಿಯಲ್ಲಿ ಇದ್ದು, ನೀವು ಈ ರೀತಿ ಮಾತಾಡಬೇಡಿ ಎಂದು ಈಶ್ವರಪ್ಪ ಮನವಿ ಮಾಡಿದರು.
, ಪಕ್ಷದಲ್ಲಿ ಶಿಸ್ತು ಕ್ರಮದ ಅವಶ್ಯಕತೆ ಇದೆ, ಅನೇಕ ಪಕ್ಷಗಳಿಂದ ಬಿಜೆಪಿಗೆ ಬಂದಿದ್ದಾರೆ. ಯಾರನ್ನು ಇಟ್ಟುಕೊಳ್ಳಬೇಕು, ಯಾರನ್ನು ತೆಗೆಯಬೇಕು ಅಂತಾ ನಾವೂ ನೋಡುತ್ತಿದ್ದೇವೆ. ಒಂದೇ ಸಲ ಪಕ್ಷ ಖಾಲಿ ಮಾಡಿಕೊಳ್ಳಲು ನಮ್ಮದು ಕಾಂಗ್ರೆಸ್ ಅಲ್ಲ. ನಮ್ಮದು ಶಿಸ್ತಿನ ಪಕ್ಷ, ನಾವು ಸರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಯಾವುದೇ ಒಬ್ಬ ವ್ಯಕ್ತಿಯಿಂದ ಬಿಜೆಪಿ ನಿಂತಿಲ್ಲ. ಜಯಪ್ರಕಾಶ್ ಹೆಗ್ಡೆ ಇನ್ನೂ ಬೇರೆ ಕಡೆ ಹೋಗಿಲ್ಲ, ಹೋಗುತ್ತಾರಾ ಅಂತಾ ಗೊತ್ತಿಲ್ಲ. ಇವತ್ತಿನವರೆಗೂ ಅವರು ಪಕ್ಷದ ವಿರುದ್ಧ ಒಂದೂ ಮಾತಾಡಿಲ್ಲ. ಅಂತವರ ಬಗ್ಗೆ ಅನಗತ್ಯವಾಗಿ ಮಾತನಾಡುವುದು ಸರಿಯಲ್ಲ ಎಂದರು.