ನವದೆಹಲಿ: ಕರ್ತವ್ಯದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡರೆ ಅಥವಾ ಸ್ವಯಂ ಪ್ರೇರಿತ ಕಾರಣಗಳಿಂದ ಉಂಟಾಗುವ ಸಾವುಗಳಿಗೆ ಅಂತ್ಯಕ್ರಿಯೆ ವೇಳೆ ಮಿಲಿಟರಿ ನಿಯಮಗಳ ಪ್ರಕಾರ ಗೌರವ (Military Honor) ನೀಡುವುದಿಲ್ಲ ಎಂದು ಭಾರತೀಯ ಸೇನೆ (Indian Army) ಹೇಳಿದೆ.
ಅಗ್ನಿವೀರ್ ಅಮೃತಪಾಲ್ ಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸೇನಾ ವಕ್ತಾರರು, ಅಗ್ನಿವೀರ್ ಎನ್ನುವ ಕಾರಣಕ್ಕೆ ಸೇನಾ ಗೌರವ ನೀಡಿಲ್ಲ ಎನ್ನುವ ಆರೋಪ ಸರಿಯಲ್ಲ. ಸ್ವಯಂ ಕಾರಣಗಳಿಂದ ಆಗುವ ಸಾವುಗಳಿಗೆ ಸೇನಾ ಗೌರವ ಸಿಗುವುದಿಲ್ಲ. ಇದನ್ನು ನಿಯಮಗಳೇ ಉಲ್ಲೇಖಿಸಿದೆ ಎಂದು ಸ್ಪಷ್ಟಪಡಿಸಿದರು.
ರಜೌರಿ ಸೆಕ್ಟರ್ನಲ್ಲಿ ಸೆಂಟ್ರಿ ಡ್ಯೂಟಿಯಲ್ಲಿದ್ದಾಗ ಸ್ವಯಂ ಪ್ರೇರಿತ ಗುಂಡಿನ ಗಾಯದಿಂದಾಗಿ ಅಮೃತಪಾಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಭಾನುವಾರ ರಾತ್ರಿಯ ಹೇಳಿಕೆಯಲ್ಲಿ ಸಿಂಗ್ ಅವರ ದುರದೃಷ್ಟಕರ ಸಾವಿಗೆ ಸಂಬಂಧಿಸಿದ ಕೆಲವು ತಪ್ಪು ತಿಳುವಳಿಕೆ ಮತ್ತು ತಪ್ಪು ನಿರೂಪಣೆ ಇದೆ ಎಂದು ಸೇನೆ ಹೇಳಿತ್ತು.
1967ರ ಅಸ್ತಿತ್ವದಲ್ಲಿರುವ ಆರ್ಮಿ ಆರ್ಡರ್ ಪ್ರಕಾರ, ಮಿಲಿಟರಿ ಶವಸಂಸ್ಕಾರಕ್ಕೆ ಅರ್ಹತೆ ಹೊಂದಿಲ್ಲ. ಈ ವಿಷಯದ ನೀತಿಯನ್ನು ಯಾವುದೇ ತಾರತಮ್ಯವಿಲ್ಲದೆ ನಿರಂತರವಾಗಿ ಅನುಸರಿಸಲಾಗಿದೆ. ದತ್ತಾಂಶದ ಪ್ರಕಾರ, 2001 ರಿಂದ 100-140 ಸೈನಿಕರ ಆತ್ಮಹತ್ಯೆ/ ಸ್ವಯಂ ಕಾರಣಗಳಿಂದ ಸಾವುಗಳು ಸಂಭವಿಸಿವೆ. ಅಂತಹ ಸಂದರ್ಭಗಳಲ್ಲಿ ಮಿಲಿಟರಿ ಅಂತ್ಯಕ್ರಿಯೆಯನ್ನು ನೀಡಲಾಗಿಲ್ಲ ಎಂದು ಸೇನೆ ಹೇಳಿದೆ.
ಅಂತ್ಯಕ್ರಿಯೆ ನಡೆಸಲು ತಕ್ಷಣದ ಆರ್ಥಿಕ ಪರಿಹಾರ ಸೇರಿದಂತೆ ಅರ್ಹತೆಗೆ ಅನುಗುಣವಾಗಿ ಹಣಕಾಸಿನ ನೆರವು ಮತ್ತು ಪರಿಹಾರವನ್ನು ಆದ್ಯತೆಯಲ್ಲಿ ನೀಡಲಾಗಿದೆ. ಇಂತಹ ದುರದೃಷ್ಟಕರವಾದ ನಷ್ಟಗಳು ಕುಟುಂಬ, ಭದ್ರತಾ ಪಡೆಗಳು ಮೇಲೆ ಭ್ರಾತೃತ್ವದ ಮೇಲೆ ಪರಿಣಾಮ ಬೀರಲಿದೆ. ಅಂತಹ ದುಃಖದ ಕ್ಷಣದಲ್ಲಿ ಕುಟುಂಬದ ಗೌರವ, ಗೌಪ್ಯತೆ ಮತ್ತು ಘನತೆಯನ್ನು ಎತ್ತಿಹಿಡಿಯುವುದು ಸಮಾಜದ ಮುಖ್ಯ ಮತ್ತು ಜವಾಬ್ದಾರಿಯಾಗಿದೆ. ಸೇನೆ ಅದನ್ನು ಮಾಡುತ್ತದೆ ಎಂದು ಹೇಳಿದ್ದಾರೆ.