ನವದೆಹಲಿ: ಕಿತ್ತಳೆ ಬಣ್ಣದ (Orange Color) ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು (Vande Bharat Express Train) ಪ್ರಾರಂಭಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಬದಲಿಗೆ ಅದರ ಹಿಂದೆ ರಾಜಕೀಯವಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.ಇತ್ತೀಚೆಗೆ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, ಮಾನವನ ಕಣ್ಣುಗಳಿಗೆ 2 ಬಣ್ಣಗಳು ಹೆಚ್ಚು ಗೋಚರಿಸುತ್ತವೆ. ಅವುಗಳೆಂದರೆ ಹಳದಿ ಮತ್ತು ಕಿತ್ತಳೆ ಬಣ್ಣ. ಯುರೋಪ್ನಲ್ಲಿ ಸುಮಾರು 80% ರೈಲುಗಳನ್ನು ಕಿತ್ತಳೆ ಅಥವಾ ಹಳದಿ ಬಣ್ಣದ ಸಂಯೋಜನೆಯೊಂದಿಗೆ ಮಾಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ಹಳದಿ ಮತ್ತು ಕಿತ್ತಳೆ ಬಣ್ಣಗಳಂತೆ ಹೊಳೆಯುವ ಬೆಳ್ಳಿಯಂತಹ ಇತರ ಹಲವು ಬಣ್ಣಗಳಿವೆ. ಆದರೆ ನಾವು ಮಾನವನ ಕಣ್ಣಿಗೆ ಚೆನ್ನಾಗಿ ಗೋಚರಿಸುವ ದೃಷ್ಟಿಕೋನದಿಂದ ಅದರ ಬಗ್ಗೆ ಮಾತನಾಡಿದರೆ, ಈ ಎರಡು ಬಣ್ಣಗಳು ಅತ್ಯುತ್ತಮವೆಂದು ಪರಿಗಣಿಸಬಹುದು ಎಂದು ವೈಷ್ಣವ್ ಹೇಳಿದರು. ವಂದೇ ಭಾರತ್ ರೈಲುಗಳಲ್ಲಿ ಕಿತ್ತಳೆ ಬಣ್ಣ ಬಳಸಿರುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಇದು 100% ವೈಜ್ಞಾನಿಕ ಚಿಂತನೆ. ಈ ಕಾರಣದಿಂದಲೇ ಹಡಗು ಹಾಗೂ ವಿಮಾನಗಳಲ್ಲಿ ಇಡಲಾಗಿರುವ ಬ್ಲ್ಯಾಕ್ ಬಾಕ್ಸ್ಗಳಿಗೆ ಕಿತ್ತಳೆ ಬಣ್ಣ ಬಳಿಯಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಳಸುವ ರಕ್ಷಣಾ ದೋಣಿಗಳು ಹಾಗೂ ಲೈಫ್ ಜಾಕೆಟ್ಗಳು ಕೂಡಾ ಕಿತ್ತಳೆ ಬಣ್ಣದಲ್ಲಿರುತ್ತವೆ ಎಂದು ಅವರು ವಿವರಿಸಿದರು.