ಯಾದಗಿರಿ: ಲಿಂಗಾಯತ ಸಿಎಂ ವಿಚಾರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ನಾನು ಡಿಸಿಎಂ ಆಗಿಯೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಗುರುಮಠಕಲ್ನಲ್ಲಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರಿಗೆ ನ್ಯಾಯಕೊಡಿಸುವ ಸಲುವಾಗಿ ನಾನು ರಾಜಕೀಯದಲ್ಲಿ ಜೀವಂತವಾಗಿದ್ದೇನೆ. ನಾನು ಉಪಮುಖ್ಯಮಂತ್ರಿಯಾಗಿಯೇ ರಾಜಕೀಯ ನಿವೃತ್ತಿಯಾಗುತ್ತೇನೆ. ಈ ಮೂಲಕ ಡಿಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾನು ಈ ಬಾರಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತೇನೆ ಎಂದಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ನನಗೆ ರಸ್ತೆ ಅಪಘಾತವಾಗಿತ್ತು. ಆಗ ನನಗೆ ಆರು ಆಪರೇಷನ್ಗಳಾಗಿವೆ. ನನ್ನ ವಿರೋಧಿಗಳು ಸಾಯುತ್ತಾರೆಂದು ಅಪಪ್ರಚಾರ ಮಾಡಿದ್ದರು. ಇದರಿಂದ ನಾನು ಸೋತಿದ್ದೇನೆ. ಇದರಿಂದ ನನ್ನ ಆತ್ಮಕ್ಕೆ ಬೆಂಕಿ ಹತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಕಾಂಗ್ರೆಸ್ ಇನ್ನಷ್ಟು ಪ್ರಬಲವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಕಾಂಗ್ರೆಸ್ (Congress) ಅಭ್ಯರ್ಥಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.