ನವದೆಹಲಿ: ಕಾವೇರಿ ರಕ್ಷಣೆಗಾಗಿ ರೈತರ ಹೋರಾಟ (Farmers Protest) ಭುಗಿಲೇಳುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD DeveGowda) ಸಹ ದನಿ ಎತ್ತಿದ್ದಾರೆ. ದೆಹಲಿಯಲ್ಲಿಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಗ್ಗಟ್ಟು ಎಲ್ಲಿದೆ? ಕಾಂಗ್ರೆಸ್, ಬಿಜೆಪಿ (Congress, BJP) ಒಂದೊಂದು ದಿಕ್ಕಿನಲ್ಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.ಕಾವೇರಿ ವಿಚಾರದಲ್ಲಿ ನಾನು ಏನೂ ಮಾತನಾಡಿಲ್ಲ. ಆದ್ರೆ ಕುಮಾರಸ್ವಾಮಿ (HD Kumaraswamy) ದೊಡ್ಡ ಅನಾಹುತ ಆಗುವ ಮುನ್ನವೇ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಎಲ್ಲಾ ಸರಿಯಾಗುತ್ತೆ ಅಂತಾರೆ. ಈಗಾಗಲೇ ಎಲ್ಲಾ ಮುಗಿದುಹೋಗಿದೆ, ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿ ಆಗಿದೆ. ಈಗ ನಾನೇನು ಸಲಹೆ ಕೊಡಲಿ? ನಾನು ಸುಪ್ರೀಂ ಕೋರ್ಟ್ ಆದೇಶದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ತಮಿಳುನಾಡು (TamilNadu), ಕರ್ನಾಟಕ ಹೊರತಾದ ಒಂದು ನಿಯೋಗ ಕಳುಹಿಸಲು ಸದನದಲ್ಲಿ ಮನವಿ ಮಾಡಿದ್ದೆ. ಕಾವೇರಿಯ ಎಲ್ಲಾ ವಿಷಯ ನನಗೆ ಗೊತ್ತಿದೆ. ಆದ್ರೆ ಮಾಜಿ ಪ್ರಧಾನಿಯಾಗಿ ಸುಪ್ರೀಂ ಕೋರ್ಟ್ ಆದೇಶ ವಿರುದ್ಧ ಮಾತನಾಡಲು ಸಾಧ್ಯವಿಲ್ಲ ಎಂದ ಅವರು, ಕರ್ನಾಟಕದಲ್ಲಿ ಒಗ್ಗಟ್ಟು ಎಲ್ಲಿದೆ? ಕಾಂಗ್ರೆಸ್, ಬಿಜೆಪಿ ಒಂದೊಂದು ದಿಕ್ಕಿನಲ್ಲಿದೆ ಎಂದಿದ್ದಾರೆ. ಇನ್ನೂ ಮಹಿಳಾ ಮೀಸಲಾತಿ ಬಿಲ್ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಪ್ರಧಾನಿಯಾಗಿದ್ದಾಗ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದೆ, ಮನಮೋಹನ್ ಸಿಂಗ್ ಕಾಲದಲ್ಲೂ ಪ್ರಯತ್ನ ನಡೆದಿತ್ತು. ಈಗ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದಿದ್ದಾರೆ.