ಚೆನೈ: ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಡಿಎಂಕೆ ನಾಯಕರ ವಿರುದ್ಧ ಮದ್ರಾಸ್ ಹೈಕೋರ್ಟ್ (Madras High Court) ಅಸಮಾಧಾನ ವ್ಯಕ್ತಪಡಿಸಿದೆ. ವಾಕ್ ಸ್ವಾತಂತ್ರ್ಯವು (Freedom Of Speech) ಮೂಲಭೂತ ಹಕ್ಕು ಆದರೆ ಅದು ದ್ವೇಷದ ಭಾಷಣವಾಗಿ ಬದಲಾಗಬಾರದು. ವಿಶೇಷವಾಗಿ ಧರ್ಮದ ವಿಷಯಗಳಿಗೆ ಸಂಬಂಧಿಸಿದಂತೆ ದ್ವೇಷ ಭಾಷಣವಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಸನಾತನ ಧರ್ಮದ ವಿರುದ್ಧ ಹೇಳಿಕೆ ಖಂಡಿಸಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎನ್ ಶೇಷಸಾಯಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಬಳಿಕ ಸನಾತನ ಧರ್ಮವೂ ಅಸ್ಪೃಶ್ಯತೆ, ಜಾತೀಯತೆಯನ್ನು ಮಾತ್ರ ಉತ್ತೇಜಿಸುತ್ತದೆ ಎನ್ನುವುದು ತಪ್ಪು. ಸಮಾನ ನಾಗರೀಕರ ದೇಶದಲ್ಲಿ ಅಸ್ಪೃಶ್ಯತೆ ಸಹಿಸಲಾಗುವುದಿಲ್ಲ. ಸಂವಿಧಾನದ 17ನೇ ವಿಧಿ ಮೂಲಕ ಅಸ್ಪೃಶ್ಯತೆಯನ್ನು ತೊಡೆದು ಹಾಕಲಾಗಿದೆ. ಹೀಗಾಗಿ ಇದ್ಯಾವುದು ಪ್ರಸುತ್ತದಲ್ಲಿಲ್ಲ ಎಂದಿದ್ದಾರೆ.
ಇಂತಹ ಭಾಷಣದಿಂದ ಯಾರ ಮನಸ್ಸಿಗೂ ಗಾಯವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಪ್ರತಿಯೊಂದು ಧರ್ಮವೂ ನಂಬಿಕೆಯ ಮೇಲೆ ಸ್ಥಾಪಿತವಾಗಿದೆ. ಭಾಷಣಗಳಿಂದ ನಂಬಿಕೆಗಳಿಗೆ ಘಾಸಿಯಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದರು. ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ಹೋಲಿಸಿ, ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದಾದ ಬಳಿಕ ದೇಶದೆಲ್ಲೆಡೆ ಈ ಹೇಳಿಕೆಗೆ ಖಂಡನೆ ವ್ಯಕ್ತವಾಗಿತ್ತು.