ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ ಕಂಪನ ದಾಖಲಾಗಿದೆ. ಅಕ್ಟೋಬರ್ 23 ರಂದು ಬೆಳ್ಳಂಬೆಳಗ್ಗೆ 2:51 ರ ವೇಳೆ ಭೂಮಿ ಕಂಪಿಸಿದೆ ಎಂದು ರಾಜ್ಯ ವಿಪತ್ತು ಮೇಲ್ವಿಚಾರಣಾ ಕೇಂದ್ರ ದೃಢಪಡಿಸಿದೆ. ಹಟ್ಟಿ, ನಿಲೋಗಲ್, ವೀರಾಪುರ, ಗೆಜ್ಜಲಗಟ್ಟಾ ಗ್ರಾಮ ವ್ಯಾಪ್ತಿಯಲ್ಲಿ ಭೂಕಂಪನವಾಗಿದ್ದು,
ಈ ಲಘು ಭೂಕಂಪನದಿಂದ ಸದ್ಯ ಯಾವುದೇ ಅಪಾಯವಾಗಿಲ್ಲ. ಗ್ರಾಮಸ್ಥರ ಅನುಭವಕ್ಕೂ ಬಾರದ ಲಘು ಭೂಕಂಪನ ಎಂದು ಕೆಎಸ್ಎನ್ಡಿಎಂಸಿ ತಿಳಿಸಿದೆ. ಇನ್ನೂ ಭೂಕಂಪದ ಕಾರಣ ಕುರಿತು ತನಿಖೆ ನಡೆದಿದೆ. ಕಲ್ಲುಗಳ ಸ್ಫೋಟದಿಂದಲೂ ಭೂಕಂಪನ ಸಾಧ್ಯತೆಯಿರುತ್ತದೆ. ತನಿಖೆ ಬಳಿಕ ಭೂಕಂಪಿಸಿರುವ ಬಗ್ಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹೇಳಿದ್ದಾರೆ.