ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಗೆ ಒಳಹರಿವು ಹೆಚ್ಚಳವಾಗಿದೆ. ಕೊಯ್ನಾ ಜಲಾಶಯ ಪ್ರದೇಶ 150 ಮಿಮೀ, ಮಹಾಬಳೇಶ್ವರ 185 ಮಿಮೀ, ನವಜಾ 201ಮಿಮೀ ಮಳೆಯಾಗುತ್ತಿರುವ ಹಿನ್ನೆಲೆ ಕೊಯ್ನಾ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೊಯ್ನಾ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆ ಕೃಷ್ಣಾ ನದಿಗೆ 1 ಲಕ್ಷ 14 ಸಾವಿರ ಕ್ಯೂಸೆಕ್ಕ್ಕಿಂತ ಹೆಚ್ಚು ನೀರು ಬಿಡಲಾಗುತ್ತಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 9 ಕೆಳಹಂತದ ಸೇತುವೆಗಳ ಜಲಾವೃತವಾಗಿದ್ದು, ಕುಡಚಿ – ಉಗಾರ ಸೇತುವೆ ಮುಳುಗಡೆ ಹಂತ ತಲುಪಿದೆ. ಕುಡಚಿ – ಉಗಾರ ಸೇತುವೆ ಮುಳುಗಡೆಗೆ ಕೇವಲ 5 ಅಡಿ ಮಾತ್ರ ಬಾಕಿ ಇದೆ.